Prayers & Meditations

Kannada · Bahá'u'lláh

Add range:

*ದೀರ್ಘ ಅನಿವಾರ್ಯ ಪ್ರಾರ್ಥನೆ (24 ಗಂಟೆಗಳಲ್ಲಿ ಒಂದು ಸಲ ಹೇಳಬೇಕಾಗಿರುವುದು)

ಯಾರು ಈ ಪ್ರಾರ್ಥನೆಯನ್ನು ಪಠಿಸಲು ಇಚ್ಛಿಸುವನೂ, ಅವನು ಎದ್ದು ನಿಲ್ಲಲಿ ಮತ್ತು ದೇವರ ಕಡೆ ತಿರುಗಲಿ, ಹಾಗೂ ಅವನು ತನ್ನ ಜಾಗದಲ್ಲಿ ನಿಲ್ಲುತ್ತಿದ್ದಂತೆ ಕೃಪಾಳುವೂ, ದಯಾಳುವೂ ಆದ ಪ್ರಭುವಿನ ಕೃಪೆಯನ್ನು ನಿರೀಕ್ಷಿಸುವಂತೆ ಬಲಗಡೆ ಹಾಗೂ ಎಡಗಡೆ ನೋಡಲಿ. ನಂತರ ಅವನು ಹೀಗೆ ಹೇಳಲಿ: ಓ ಸರ್ವ ನಾಮಾಂಕಿತಗಳ ಪ್ರಭುವೇ ಮತ್ತು ಸ್ವಗಗಳ ಸೃಷ್ಟಿಕರ್ತನೇ! ನನ್ನ ಪ್ರಾರ್ಥನೆಯನ್ನು ನಿನ್ನ ಸೌಂದರ್ಯದಿಂದ ನನ್ನನ್ನು ಮರೆ ಮಾಡಿರುವ ಪರದೆಗಳನ್ನು ದಹಿಸುವಂತಹ ಬೇಂಕಿಯಂತೆಯೂ ಹಾಗೂ ನಿನ್ನ ಸಮ್ಮುಖದ ಸಾಗರದ ಬಳಿಗೆ ಕರೆದೊಯ್ಯುವ ಪ್ರಕಾಶದಂತೆಯೂ ಮಾಡು ಎಂದು ಸರ್ವೋತ್ಕರ್ಷ ಹಾಗೂ ಮಹಾಮಹಿಮಾನ್ವಿತ ನಿನ್ನ ಅದೃಶ್ಯ ಸಾರದ ದಿನ ಚಿಲುಮೆಗಳ ಮೂಲಕ ಪ್ರಾರ್ಥಿಸುತ್ತಿದ್ದೇನೆ.

ಪೂಜ್ಯನೂ ಮತ್ತು ಸರ್ವೋತ್ಕರ್ಷನೂ ಆದ ದೇವರನ್ನು ಯಾಚಿಸಲು ಅವನು ತನ್ನ ಕೈಗಳನ್ನೆತ್ತಿ ಹೀಗೆ ಹೇಳಲಿ: ಓ ಪ್ರಪಂಚಗಳ ಆಕಾಂಕ್ಷೆಯೇ ಮತ್ತು ರಾಷ್ಟ್ರಗಳ ಪ್ರಿಯನೇ! ನಿನ್ನ ಹೊರತು ಎಲ್ಲಾ ಮೋಹಗಳಿಂದ ವಿಮುಕ್ತನಾಗಿ ನಿನ್ನೆಡೆಗೆ ತಿರುಗಿರುವುದನ್ನು ಹಾಗೂ ಯಾವುದರ ಚಲನೆಯಿಂದ ಸಮಸ್ತ ಸೃಷ್ಟಿಯೇ ಕಲಕಿ ಹೋಯಿತೋ, ಅಂತಹ ನಿನ್ನ ಪಾಶಕ್ಕೆ ನಾನು ಅಂಟಿಕೊಂಡಿರುವುದನ್ನು ನೀನು ನೋಡುತ್ತಿರುವೆ. ನಾನು ನಿನ್ನ ಸೇವಕ, ಓ ನನ್ನ ಪ್ರಭುವೇ, ಮತ್ತು ನಿನ್ನ ಸೇವಕನ ಪುತ್ರ ನಿನ್ನ ಇಚ್ಛೆ ಹಾಗೂ ಅಕಾಂಕ್ಷೆಯಂತೆ ನಡೆಯಲು ಸಿದ್ಧನಾಗಿರುವುದನ್ನೂ ಮತ್ತು ನಿನ್ನ ಸಂತೋಷವನ್ನಲ್ಲದೆ ಮತ್ತೇನನ್ನೂ ಆಶಿಸದೆ ನಿಂತಿರುವುದನ್ನೂ ನೀನು ನೋಡು. ನಿನ್ನ ಸೇವಕರ ಜೊತೆ ನಿನ್ನ ಇಚ್ಛೆ ಹಾಗೂ ಸಂತೋಷದಂತೆ ಮಾಡೆಂದು ನಾನು ನಿನ್ನ ಕೃಪಾಸಾಗರ ಹಾಗೂ ನಿನ್ನ ಅನುಗ್ರಹದ ದಿನ-ನಕ್ಷತ್ರದ ಮೂಲಕ ನಿನ್ನಲ್ಲಿ ಮೊರೆ ಇಡುತ್ತಿದ್ದೇನೆ. ಎಲ್ಲಾ ಹೇಳಿಕೆ ಮತ್ತು ಪ್ರಶಂಸೆಗೂ ಮೀರಿದ ನಿನ್ನ ಶಕ್ತಿಯಾಣೆ! ನಿನ್ನಿಂದ ಪ್ರಕಟಗೊಂಡಿರುವುದೆಲ್ಲವೂ ನನ್ನ ಹೃದಯದ ಬಯಕೆ ಮತ್ತು ನನ್ನ ಆತ್ಮದ ಅಕ್ಕರೆಯಾಗಿದೆ. ಓ ದೇವರೇ, ನನ್ನ ದೇವರೇ! ನನ್ನ ನಿರೀಕ್ಷೆ ಮತ್ತು ಕೃತಿಗಳತ್ತ ನೋಡಬೇಡ, ಬದಲಾಗಿ ಭೂಮಿ ಮತ್ತು ಸ್ವರ್ಗಗಳನ್ನು ಆವರಿಸುವಂತಹ ನಿನ್ನ ಇಚ್ಛೆಯತ್ತ ನೋಡು. ನಿನ್ನ ಮಹಾಮಹಿಮ ನಾಮಾಂಕಿತದ ಮೂಲಕ, ಓ ಎಲ್ಲಾ ರಾಷ್ಟ್ರಗಳ ಪ್ರಭುವೇ, ನೀನು ಏನನ್ನು ಆಶಿಸಿದ್ದಿಯೋ ಅದನ್ನೇ ನಾನು ಆಶಿಸಿದ್ದೇನೆ, ಮತ್ತು ನೀನು ಏನನ್ನು ಪ್ರೀತಿಸುವೆಯೋ ಅದನ್ನೇ ನಾನು ಪ್ರೀತಿಸುವೆ.
ಅವನು ಮೊಣಕಾಲೂರಿ, ಹಣೆಯನ್ನು ನೆಲಕ್ಕೆ ಬಾಗಿಸಿ ಹೀಗೆ ಹೇಳಲಿ: ನಿನ್ನ ಹೊರತು ಬೇರೆಲ್ಲಾ ವಿವರಣೆಗಳಿಗಿಂತಲೂ ಮತ್ತು ನಿನ್ನ ಹೊರತು ಬೇರೆಲ್ಲದರ ಗ್ರಹಣ ಶಕ್ತಿಗಿಂತಲೂ ನೀನು ಮಹಾಮಹಿಮನಿದ್ದೀಯೇ. ನಂತರ ಅವನು ನಿಂತು ಹೀಗೆ ಹೇಳಲಿ : ಓ ನನ್ನ ಪ್ರಭುವೇ, ನನ್ನ ಪ್ರಾರ್ಥನೆಯನ್ನು ಜೀವಜಲದ ಕಾರಂಜಿಯನ್ನಾಗಿಸು. ಅದರಿಂಡ ನಾನು ನಿನ್ನ ಸಾರ್ವಭೌಮತ್ವವಿರುವ ತನಕ ಬಾಳುವಂತಾಗಲಿ ಮತ್ತು ನಿನ್ನ ಪ್ರಪಂಚಗಳ ಪ್ರತಿಯೊಂದು ಪ್ರಪಂಚದಲ್ಲೂ ನಿನ್ನ ಸ್ಮರಣೆ ಮಾಡುವಂತಾಗಲಿ ಪುನಃ ಅವನು ತನ್ನ ಕೈಗಳನ್ನು ಮೇಲೆತ್ತಿ ಬೇಡುತ್ತಾ ಹೀಗೆ ಹೇಳಲಿ: ಓ ಯಾರ ಅಗಲಿಕೆಯಿಂದ ಹೃದಯಗಳು ಮತ್ತು ಆತ್ಮಗಳು ಕರಗಿದ್ದವೋ ಹಾಗೂ ಯಾರ ಪ್ರೇಮದ ಅಗ್ನಿಯಿಂದ ಇಡೀ ಪ್ರಪಂಚವೇ ಜ್ವಲಿಸಿತೋ ಅವನೇ ನೀನು! ಎಲ್ಲ ಜನರನ್ನಾಳುವವನೇ! ನಿನ್ನಲ್ಲಿರುವುದೆಲ್ಲವನ್ನೂ ನನ್ನಿಂದ ತಡೆಗಟ್ಟದಿರೆಂದು ಸಮಸ್ತ ಸೃಷ್ಟಿಯನ್ನೇ ನಿಗ್ರಹಿಸಿರುವ ನಿನ್ನ ನಾಮದ ಮೂಲಕ ನಾನು ನಿನ್ನಲ್ಲಿ ಮೊರೆಯಿಡುತ್ತಿದ್ದೇನೆ. ಓ ಪ್ರಭುವೇ, ಈ ಅಪರಿಚಿತನು ನಿನ್ನ ಭವ್ಯತೆಯ ಮೇಲ್ಕಟ್ಟಿನ ಆಶ್ರಯದಲ್ಲಿರುವ ಹಾಗೂ ನಿನ್ನ ಕೃಪೆಯ ಆವರಣದಲ್ಲಿರುವ ಅವನ ಮಹೋನ್ನತವಾದ ಬೀಡಿಗೆ ತ್ವರೆಯಾಗಿ ಹೋಗುವುದನ್ನೂ, ಈ ಅತಿಕ್ರಮಿಯು ನಿನ್ನ ಕ್ಷಮಾ ಸಾಗರವನ್ನರಸುವುದನ್ನೂ; ಈ ದೀನನೂ ನಿನ್ನ ವೈಭವದ ಆಸ್ಥಾನವನ್ನೂ ಹಾಗೂ ಈ ಬಡಪಾಯಿಯು ನಿನ್ನ ಐಶ್ವರ್ಯವನ್ನು ಅರಸುವುದನ್ನೂ ನೀನು ನೋಡುತ್ತಿರುವೆ. ನಿನ್ನ ಅಪೇಕ್ಷೆಯಂತೆಯೇ ಅಪ್ಪಣೆ ನೀಡುವ ಅಧಿಕಾರ ನಿನ್ನದಾಗಿರುವುದು. ನಿನ್ನ ಕೃತಿಗಳಲ್ಲಿ ನೀನು ಪ್ರಶಂಸಿಸಲ್ಪಡಬೇಕಾಗಿರುವುದಕ್ಕೂ, ನಿನ್ನ ಅಪ್ಪಣೆಗೆ ಎಲ್ಲರೂ ಬದ್ಧರಾಗಿರಬೇಕೆಂಬುದಕ್ಕೂ ಹಾಗೂ ನಿನ್ನಾಜ್ಞೆಯಲ್ಲಿ ನಿರ್ಬಂಧದಲ್ಲಿರಬೇಕಾಗಿರುವುದಕ್ಕೂ ನಾನು ಸಾಕ್ಷಿಯಾಗಿದ್ದೇನೆ. ನಂತರ ಅವನು ತನ್ನ ಕೈಗಳನ್ನು ಮೇಲೆತ್ತಲಿ ಹಾಗೂ ಮೂರು ಸಲ ಮಹೋನ್ನತ ನಾಮ (ಅಲ್ಹಾ-ಓ-ಅಭಾ)ವನ್ನು ಉಚ್ಚರಿಸಲಿ, ನಂತರ ಅವನು ಕೈಯನ್ನು ಮೊಣಕಾಲ ಮೇಲಿರಿಸಿ ದೇವರ ಮುಂದೆ – ಆತನು ಅನುಗ್ರಹಿತನು ಮತ್ತು ಮಹೋನ್ನತನು -ಬಗ್ಗಿ ಹೀಗೆ ಹೇಳಲಿ: ಓ ನನ್ನ ದೇವರೇ, ಪೂಜಿಸುವ ಹೆಬ್ಬಯಕೆ ಮತ್ತು ಸ್ಮರಿಸುವ ಹಾಗೂ ಸ್ತುತಿಸುವ ಹಂಬಲಿಕೆಯಲ್ಲಿ ಹಾಗೂ ನನ್ನ ಚೈತನ್ಯವು ನನ್ನ ಕೈಕಾಲುಗಳಲ್ಲಿ ಮತ್ತು ಅಂಗಾಂಗಗಳಲ್ಲಿ ಹೇಗೆ ಕಲಕಿದೆ ಎಂಬುದನ್ನೂ, ನಿನ್ನ ನುಡಿಯ ಸಾಮ್ರಾಜ್ಯದಲ್ಲಿ ಮತ್ತು ನಿನ್ನ ಜ್ಞಾನದ ಸ್ವರ್ಗದಲ್ಲಿ ನಿನ್ನ ಆಜ್ಞೆಯ ನಾಲಿಗೆಯು ಸಾಕ್ಷಿ ನುಡಿದಿದ್ದಂತೆ ಅದು ಹೇಗೆ ಸಾಕ್ಷಿ ನುಡಿದಿದೆ ಎಂಬುದನ್ನು ನೀನು ನೋಡುತ್ತಿರುವೆ. ಓ ನನ್ನ ಪ್ರಭುವೇ, ನಾನು ನನ್ನ ಬಡತನವನ್ನು ನಿರೂಪಿಸಿ, ನಿನ್ನ ಉದಾರತೆ ಮತ್ತು ಸಿರಿವಂತಿಕೆಯನ್ನು ದೊಡ್ಡದಾಗಿಸುವಂತೆಯೂ ಮತ್ತು ನನ್ನ ದುರ್ಬಲತೆಯನ್ನು ಘೋಷಿಸಿ ನಿನ್ನ ಶಕ್ತಿ ಮತ್ತು ವೈಭವವನ್ನು ಪ್ರತಿಪಾದಿಸುವಂತಾಗಲೆಂದು ನಿನ್ನಲ್ಲಿರುವುದೆಲ್ಲವನ್ನೂ ಪ್ರಾರ್ಥಿಸುವಂತೆ, ನಾನೀ ಸ್ಥಿತಿಯಲ್ಲಿರಲು ಇಚ್ಛಿಸುತ್ತೇನೆ. ನಂತರ ಅವನು ನಿಂತು ಕೈಗಳನ್ನು ಎರಡು ಬಾರಿ ಮೇಲೆತ್ತಿಯಾಚಿಸುತ್ತಾ ಹೀಗೆ ಹೇಳಲಿ: ನೀನಲ್ಲದೆ ಬೇರೆ ದೇವರಿಲ್ಲ, ಸರ್ವಶಕ್ತನೂ, ಸರ್ವ ಉದಾರಿಯೂ ಆದ, ಆದಿಯಲ್ಲೂ ಮತ್ತು ಅಂತ್ಯದಲ್ಲೂ, ವಿಧೇಯಕನಾಗಿರುವ ನೀನಲ್ಲದೆ ಬೇರೆ ದೇವರಿಲ್ಲ. ಓ ದೇವರೇ ನನ್ನ ದೇವರೇ! ನಿನ್ನ ಕ್ಷಮೆಯು ನನಗೆ ಧೈರ್ಯವನ್ನು ತಂದು ಕೊಟ್ಟಿದೆ ಮತ್ತು ನಿನ್ನ ಕರುಣೆಯು ನನಗೆ ಶಕ್ತಿಯನ್ನು ಕೊಟ್ಟಿದೆ ಮತ್ತು ನಿನ್ನ ಕರೆಯು ನನ್ನನ್ನು ಎಚ್ಚರಿಸಿದೆ ಮತ್ತು ನಿನ್ನ ಅನುಗ್ರಹವು ನನ್ನನ್ನು ಮೇಲೆತ್ತಿ ನಿನ್ನೆಡೆಗೆ ಕರೆತಂದಿದೆ. ಇಲ್ಲವಾದರೆ ನಿನ್ನ ಸಾಮೀಪ್ಯದ ನಗರದ ದ್ವಾರದಲ್ಲಿ ನಿಲ್ಲಲು ಅಥವಾ ನಿನ್ನ ಇಚ್ಚೆಯ ಸ್ವರ್ಗದಿಂದ ಪ್ರಕಾಶಿಸುತ್ತಿರುವ ಬೆಳಕಿನೆಡೆಗೆ ನನ್ನ ಮುಖವನ್ನು ತಿರುಗಿಸುವ ಧೈರ್ಯ ಮಾಡಲು ನಾನ್ಯಾರು? ಓ ನನ್ನ ಪ್ರಭುವೇ, ಈ ಅನಿಷ್ಟ ಜೀವಿಯು ನಿನ್ನ ಅನುಗ್ರಹದ ಬಾಗಿಲನ್ನು ತಟ್ಟುತ್ತಿರುವುದನ್ನೂ ಮತ್ತು ಈ ಅಸ್ಥಿರ ಆತ್ಮವು ನಿನ್ನ ಅನುಗ್ರಹದ ಕೈಗಳಿಂದ ಅವಿನಾಶಿ ಜೀವನದಿಯನ್ನು ಹುಡುಕುತ್ತಿರುವುದನ್ನೂ ನೀನು ನೋಡುತ್ತಿರುವೆ. ಎಲ್ಲಾ ಕಾಲದಲ್ಲೂ ನಿನ್ನದೆ ಅಧಿಪತ್ಯ. ನೀನೇ ಎಲ್ಲಾ ನಾಮಾಂಕಿತಗಳ ಪ್ರಭುವಾಗಿರುವೆ; ಮತ್ತು ಓ ಸ್ವರ್ಗಗಳ ಸೃಷ್ಟಿಕರ್ತನೇ, ನಿನ್ನ ಇಚ್ಛೆಗೆ ನನ್ನದೆಲ್ಲವೂ ಒಪ್ಪಿಸಲ್ಪಟ್ಟಿದೆ ಹಾಗೂ ಮನಸಾರೆ ಸಮರ್ಪಿತವಾಗಿದೆ. ಅವನು ತನ್ನ ಕೈಗಳನ್ನು ಮೂರು ಬಾರಿ ಮೇಲೆತ್ತಿ ಹೀಗೆ ಹೇಳಲಿ: ಪ್ರತಿಯೊಂದು ಹಿರಿಮೆಗಿಂತಲೂ ದೇವರು ಮಹಾಮಹಿಮನಾಗಿರುವನು! ನಂತರ ಅವನು ಮೊಣಕಾಲೂರಲಿ ಮತ್ತು ಹಣೆಯನ್ನು ನೆಲಕ್ಕೆ ಬಗ್ಗಿಸಿ ಹೀಗೆ ಹೇಳಲಿ: ನಿನ್ನ ಸಾಮೀಪ್ಯದ ಸ್ವರ್ಗವನ್ನೇರಲಿಕ್ಕಾಗಲೀ ಅಥವಾ ನಿನ್ನ ಭಕ್ತರ ಹೃದಯ ಪಕ್ಷಿಗಳು ನಿನ್ನ ಮಹಾದ್ವಾರದ ಬಾಗಿಲ ಬಳಿ ಬರಲಿಕ್ಕಾಗಲೀ, ನಿನ್ನ ಸಾಮೀಪ್ಯದಲ್ಲಿರುವವರ ಪ್ರಶಂಸೆಗೂ ಮೀರಿದವನು ನೀನು. ನೀನು ಎಲ್ಲಾ ಗುಣಗಳನ್ನೂ ಮೀರಿದ ಪರಮ ಪಾವನನು, ಎಂದು ನಾನು ಸಾಕ್ಷಿ ನುಡಿಯುತ್ತೇನೆ. ಮಹೋನ್ನತನೂ, ಸರ್ವ ಮಹಾಮಹಿಮನೂ ಆದ ನೀನಲ್ಲದೆ ಬೇರೆ ದೇವರಿಲ್ಲ. ನಂತರ ಅವನು ಕುಳಿತುಕೊಂಡು ಹೀಗೆ ಹೇಳಲಿ: ಯಾವುದನ್ನು ಸಮಸ್ತ ಸೃಷ್ಟಿಗಳೂ, ಮೇಲಿನ ದೈವಗುಣಗಳು, ಸರ್ವೋಚ್ಛ ಸ್ವರ್ಗದ ನಿವಾಸಿಗಳು, ಎಲ್ಲದಕ್ಕಿಂತಲೂ ಮೇಲಾಗಿ ಮಹಿಮಾವಂತ ದಿಗಂತದಿಂದ ಸ್ವಯಂ ವೈಭವದ ಜಿಹ್ವೆಯೂ ನೀನೇ ದೇವರು ಮತ್ತು ನೀನಲ್ಲದೆ ಬೇರೆ ದೇವರಿಲ್ಲ ಹಾಗೂ ಪ್ರಕಟಗೊಂಡಾತನು ಒಂದು ಗುಪ್ತ ರಹಸ್ಯವೆಂದೂ, ಅತ್ಯಮೂಲ್ಯವಾದ ಲಾಂಛನವೆಂದೂ, ಯಾರ ಮೂಲಕ ಭ ಹಾಗೂ ವ (ಭವ) ಅಕ್ಷರಗಳು ಒಂದುಗೂಡಿ ಹೆಣೆದುಕೊಂಡಿರುವುದನ್ನೂ ಪ್ರಮಾಣಿಸಿದ್ದವೋ ಅದಕ್ಕೆ ನಾನು ಸಾಕ್ಷಿ ನುಡಿಯುತ್ತಿದ್ದೇನೆ. ಯಾರ ಹೆಸರನ್ನು ಸರ್ವೋಚ್ಛ ಲೇಖನಿಯು ಉಚ್ಚರಿಸಿತೋ ಹಾಗೂ ಮೇಲಣ ಸಿಂಹಾಸನ ಹಾಗೂ ಭೂಮಿಯ ಪ್ರಭುವಾಗಿರುವ ದೇವರ ಗ್ರಂಥಗಳಲ್ಲಿ ಉಲ್ಲೇಖಿತವಾಯಿತೋ ಅದು ಆತನೆಂದು ನಾನು ಸಾಕ್ಷಿ ನುಡಿಯುತ್ತಿದ್ದೇನೆ. ನಂತರ ಅವನು ನೆಟ್ಟಗೆ ನಿಂತು ಹೀಗೆ ಹೇಳಲಿ: ಓ ಸರ್ವಾಸ್ತಿತ್ವಗಳ ಪ್ರಭುವೇ, ಸದೃಶ್ಯ ಮತ್ತು ಅದೃಶ್ಯ ವಸ್ತುಗಳ ಒಡೆಯನೇ! ನೀನು ನನ್ನ ಕಣ್ಣೀರನ್ನು ಮತ್ತು ನನ್ನ ನಿಟ್ಟುಸಿರನ್ನು ನೋಡುತ್ತಿರುವೆ ಮತ್ತು ನನ್ನ ನರಳಾಟವನ್ನೂ ಮತ್ತು ಗೋಳಾಟವನ್ನೂ ಹಾಗೂ ನನ್ನ ಹೃದಯದ ಶೋಕವನ್ನೂ ಆಲಿಸುತ್ತಿರುವೆ. ನಿನ್ನ ಪರಾಕ್ರಮದ ಸಾಕ್ಷಿಯಾಗಿ! ನನ್ನ ಅಪರಾಧಗಳು ನನ್ನನ್ನು ನಿನ್ನ ಸಮೀಪ ಬಾರದಂತೆ ತಡೆಗಟ್ಟಿವೆ; ಮತ್ತು ನನ್ನ ಪಾಪಗಳು ನನ್ನನ್ನು ನಿನ್ನ ಪವಿತ್ರತೆಯ ಆಸ್ಥಾನದಿಂದ ಬಹುದೂರವಿಟ್ಟಿವೆ; ಓ ನನ್ನ ಪ್ರಭುವೇ, ನಿನ್ನ ಪ್ರೀತಿಯು ನನ್ನನ್ನು ಸಿರಿವಂತನನ್ನಾಗಿಸಿದೆ, ಮತ್ತು ನಿನ್ನ ಅಗಲಿಕೆಯು ನನ್ನನ್ನು ನಾಶಪಡಿಸಿದೆ. ಹಾಗೂ ನಿನ್ನಿಂದ ದೂರವಿರುವಿಕೆಯು ನನ್ನನ್ನು ಶೋಷಿಸಿದೆ. ನಾನಿಲ್ಲಿರುವೆ, ನಾನಿಲ್ಲಿರುವೆ, ಎಂದು ನಿನ್ನ ಆರಿಸಲ್ಪಟ್ಟವರು ಈ ಅಗಾಧತೆಯಲ್ಲಿ ನುಡಿದರೋ ಆ ನುಡಿಗಳಿಂದ ಮತ್ತು ನಿನ್ನ ಸಾಕ್ಷಾತ್ಕಾರದ ಉಸಿರಿನಿಂದ ಹಾಗೂ ನಿನ್ನ ಅವತಾರದ ಮುಂಜಾನೆಯ ತಂಗಾಳಿಯಿಂದ ನಾನು ನಿನ್ನ ಸೌಂದರ್ಯವನ್ನು ನೋಡುವಂತೆಯೂ ಮತ್ತು ನಿನ್ನ ಗ್ರಂಥದಲ್ಲಿರುವುದೆಲ್ಲವನ್ನೂ ಪರಿಪಾಲಿಸುವಂತೆಯೂ ಆಜ್ಞಾಪಿಸು ಎಂದು ನಾನು ನಿನ್ನಲ್ಲಿ ನಿನ್ನ ಹೆಜ್ಜೆಗಳೊಂದಿಗೆ ಈ ನಿಸ್ಸಾರತೆಯಲ್ಲಿ ಪ್ರಾರ್ಥಿಸುತ್ತಿದ್ದೇನೆ. ಅವನು ಬಳಿಕೆ ಮೂರು ಬಾರಿ ‘ಮಹೋನ್ನತ ನಾಮ’ (ಅಲ್ಹಾ-ಓ-ಆಭಾ)ವನ್ನು ಉಚ್ಚರಿಸಲಿ ಮತ್ತು ತನ್ನ ಕೈಯನ್ನು ಮೊಣಕಾಲ ಮೇಲಿಟ್ಟು ಬಗ್ಗಿ ಹೀಗೆ ಹೇಳಲಿ: ಓ ನನ್ನ ದೇವರೇ, ನಿನ್ನನ್ನು ಸ್ಮರಿಸುವಂತೆ ಮತ್ತು ಸ್ತುತಿಸುವಂತೆ ನೀನು ನನಗೆ ಸಹಾಯ ನೀಡಿದ್ದಕ್ಕಾಗಿ ಮತ್ತು ನಿನ್ನ ಚಿಹ್ನೆಗಳ ದಿನ ಚಿಲುಮೆಯನ್ನು ನಾನು ತಿಳಿಯುವಂತೆ ಮಾಡಿದ್ದಕ್ಕಾಗಿ ಮತ್ತು ನಾನು ನಿನ್ನ ಪ್ರಭುತ್ವಕ್ಕೇ ಶರಣಾಗುವಂತೆ ಮಾಡಿದ್ದಕ್ಕಾಗಿ ಮತ್ತು ನಿನ್ನ ದೈವತ್ವದ ಮುಂದೆ ವಿನಮ್ರನಾಗಿ ಮಾಡಿದ್ದಕ್ಕಾಗಿ ಮತ್ತು ನಿನ್ನ ವೈಭವದ ಜಿಹ್ವೆಯ ನುಡಿಗಳನ್ನು ಸ್ವೀಕರಿಸುವಂತೆ ಮಾಡಿದ್ದಕ್ಕಾಗಿ ನಿನಗೆ ಪ್ರಶಂಸೆಯಾಗಲಿ. *ನಂತರ ಅವನು ಎದ್ದು ಹೀಗೆ ಹೇಳಲಿ: ಓ ದೇವರೇ, ನನ್ನ ದೇವರೇ! ನನ್ನ ಬೆನ್ನು ನನ್ನ ಪಾಪದ ಹೊರೆಯಿಂದ ಬಾಗಿಹುದು ಮತ್ತು ನಿನ್ನ ನಿರ್ಲಕ್ಷತೆಯು ನನ್ನನ್ನು ನಾಶ ಮಾಡಿಹುದು. ಯಾವಾಗ ನಾನು ನನ್ನ ಕೆಟ್ಟ ಕಾರ್ಯಗಳನ್ನು ಮತ್ತು ನಿನ್ನ ಔದಾರ್ಯವನ್ನು ವಿಮರ್ಶಿಸುತ್ತೇನೋ ಆಗ ನನ್ನ ಹೃದಯವು ನನ್ನಲ್ಲೇ ಕರಗಿ ಹೋಗುವುದು ಮತ್ತು ನನ್ನ ರಕ್ತವು ನನ್ನ ನಾಡಿಗಳಲ್ಲಿ ಕುದಿಯುವುದು. ಓ ಪ್ರಪಂಚಗಳ ಆಕಾಂಕ್ಷೆಯೇ! ನಿನ್ನ ಸೌಂದರ್ಯದಾಣೆ! ನನ್ನ ಮುಖವನ್ನು ನಿನ್ನೆಡೆಗೆ ಎತ್ತಲು ನಾನು ನಾಚಿಕೆಯಿಂದ ಬಣ್ಣಗುಂದಿರುವೆ ಮತ್ತು ನನ್ನ ಹೆಬ್ಬಯಕೆಯ ಕೈಗಳು ನಿನ್ನ ಅನುಗ್ರಹದ ಸ್ವರ್ಗದೆಡೆ ಚಾಚಲು ಲಜ್ಜಿತವಾಗಿವೆ. ಓ ನನ್ನ ದೇವರೇ, ನಿನ್ನನ್ನು ಸ್ಮರಿಸಲು ಹಾಗೂ ನಿನ್ನ ಗುಣಗಾನ ಮಾಡಲು ನನ್ನ ಕಣ್ಣೀರು ಹೇಗೆ ನನ್ನನ್ನು ತಡೆಯುತ್ತಿದೆ ಎಂದು ನೀನು ನೋಡುತ್ತಿರುವೆ, ಓ ಇಹಲೋಕ ಮತ್ತು ಪರಲೋಕದ ಸಿಂಹಾಸನಾಧಿಕಾರಿಯೇ! ನಿನ್ನ ಸಾಮ್ರಾಜ್ಯದ ಚಿಹ್ನೆಗಳಿಂದ ಮತ್ತು ನಿನ್ನ ಪ್ರಭುತ್ವದ ರಹಸ್ಯಗಳ ಮೂಲಕ ನಿನ್ನ ಔದಾರ್ಯದಂತೆ ನಿನ್ನ ಪ್ರೀತಿಪಾತ್ರರನ್ನು ನಡೆಸಿಕೋ ಎಂದು ನಾನು ನಿನ್ನಲ್ಲಿ ಬೇಡುವೆನು. ಓ ಸರ್ವಾಸ್ತಿತ್ವದ ಪ್ರಭುವೇ, ಮತ್ತು ನಿನ್ನ ಅನುಗ್ರಹಕ್ಕೆ ಪಾತ್ರನು, ಓ ಗೋಚರ ಮತ್ತು ಅಗೋಚರ ಸಾಮ್ರಾಟನೇ! ನಂತರ ಅವನು ‘ಮಹೋನ್ನತ ನಾಮ’ (ಅಲ್ಹಾ-ಓ –ಆಭಾ)ವನ್ನು ಮೂರು ಸಲ ಉಚ್ಚರಿಸಲಿ ಮತ್ತು ತನ್ನ ಹಣೆಯನ್ನು ನೆಲಕ್ಕೆ ಮುಟ್ಟಿಸಿ ಹೀಗೆ ಹೇಳಲಿ: ಓ ನಮ್ಮ ದೇವರೇ, ನೀನು ನಮ್ಮನ್ನು ನಿನ್ನ ಸಾಮೀಪ್ಯಕ್ಕೆ ಸೆಳೆಯುವಂತಹದ್ದನ್ನು ಕರುಣಿಸಿದ್ದಕ್ಕಾಗಿ ಮತ್ತು ನಿನ್ನಿಂದ ಕಳುಹಿಸಲ್ಪಟ್ಟ ನಿನ್ನ ಪುಸ್ತಕಗಳು ಮತ್ತು ನಿನ್ನ ಗ್ರಂಥಗಳಲ್ಲಿರುವ ಪ್ರತಿಯೊಂದು ಒಳ್ಳೆಯ ವಸ್ತುವನ್ನೂ ನೀನು ಪೂರೈಸಿರುವುದಕ್ಕಾಗಿ ನಿನಗೆ ಪ್ರಶಂಸೆಯಾಗಲಿ. ಓ ನನ್ನ ಪ್ರಭುವೇ, ಅಪ್ರಯೋಜಕ ಕಲ್ಪನೆಗಳಿಂದ ಮತ್ತು ವ್ಯರ್ಥ ಅಲೋಚನೆಗಳಿಂದ ನಮ್ಮನ್ನು ರಕ್ಷಿಸೆಂದು ನಾವು ನಿನ್ನಲ್ಲಿ ಬೇಡಿಕೊಳ್ಳುವೆವು. ನಿಜವಾಗಿಯೂ, ನೀನು ಪರಾಕ್ರಮಿ ಮತ್ತು ಸರ್ವಜ್ಞ. ನಂತರ ಅವನು ತನ್ನ ತಲೆಯನ್ನು ಎತ್ತಲಿ ಮತ್ತು ಕುಳಿತುಕೊಂಡು ಹೀಗೆ ಹೇಳಲಿ ನಿನ್ನಿಂದ ಆರಿಸಲ್ಪಟ್ಟವರು ಸಾಕ್ಷಿ ನುಡಿದಿದ್ದಕ್ಕೂ, ಮತ್ತು ಒಪ್ಪಿಕೊಂಡಿರುವುದಕ್ಕೂ, ಸರ್ವೋಚ್ಚ ಸ್ವರ್ಗದ ನಿವಾಸಿಗಳು ಮತ್ತು ನಿನ್ನ ಮಹಾಸಿಂಹಾಸನದ ಪ್ರದಕ್ಷಿಣೆ ಮಾಡಿದವರು ಒಪ್ಪಿಕೊಂಡಿದ್ದಕ್ಕೂ ನಾನು ಸಾಕ್ಷಿ ನುದಿಯುತ್ತೇನೆ. ಭೂಮಿ ಮತ್ತು ಸ್ವರ್ಗದಲ್ಲಿರುವ ಸಾಮ್ರಾಜ್ಯಗಳೆಲ್ಲವೂ ನಿನ್ನವೇ, ಓ ಪ್ರಪಂಚಗಳ ಪ್ರಭುವೇ!

*(ಈಗ ಶಾಸನವನ್ನು ಬಾಬ್ ಹಾಗೂ Baha’u’llah ರವರ ಪವಿತ್ರ ಸಮಾಧಿಗಳ ಬಳಿ ಪಠಿಸಲಾಗುತ್ತದೆ. ಆಗಾಗ್ಗೆ ಅವರ ಜಯಂತಿಗಳ ಸ್ಮರಣೋತ್ಸವದಲ್ಲೂ ಇದನ್ನು ಉಪಯೋಗಿಸಲಾಗುತ್ತದೆ.) ಓ ಮಹಾವೈಭವದ ಅವತಾರವೇ ಮತ್ತು ಚಿರಂತನತೆಯ ದೊರೆಯೇ ಹಾಗೂ ಭೂಮಿ ಮತ್ತು ಸ್ವರ್ಗದಲ್ಲಿರುವವರೆಲ್ಲರ ಪ್ರಭುವೇ, ನಿನ್ನ ಪರಮ ಶ್ರೇಷ್ಠ ಆತ್ಮದಿಂದಲೇ ಉದಯಿಸಿರುವ ಪ್ರಶಂಸೆ ಹಾಗೂ ನಿನ್ನ ಪ್ರಕಾಶಮಾನವಾದ ಸೌಂದರ್ಯದಿಂದ ಕಂಗೊಳಿಸಿರುವ ವೈಭವವು ನಿನ್ನ ಮೇಲಿರಲಿ! ನಿನ್ನಿಂದಲೇ ದೇವರ ಪ್ರಭುತ್ವ ಮತ್ತು ಆತನ ಸಾಮ್ರಾಜ್ಯ, ಹಾಗೂ ದೇವರ ಭವ್ಯತೆ ಮತ್ತು ಆತನ ಗಾಂಭೀರ್ಯ ಪ್ರಕಟಗೊಂಡಿರುವವೆಂದೂ, ಹಾಗೂ ನಿನ್ನ ಬದಲಾಯಿಸಲಾಗದ ಶಾಸನದ ಸ್ವರ್ಗದಲ್ಲಿ ಪುರಾತನ ವೈಭವದ ದಿನ ನಕ್ಷತ್ರಗಳು ತಮ್ಮ ಕಾಂತಿಯನ್ನು ಪಸರಿಸಿವೆಯೆಂದೂ ಹಾಗೂ ಅದೃಶ್ಯ ಸೌಂದರ್ಯವು ಸೃಷ್ಟಿಯ ದಿಗಂತದ ಮೇಲೆ ಪ್ರಕಾಶಿಸಿರುವುದೆಂದೂ ನಾನು ಸಾಕ್ಷಿ ನುಡಿಯುತ್ತೇನೆ. ಅದೂ ಅಲ್ಲದೆ, ನಿನ್ನ ಲೇಖನಿಯ ಕೇವಲ ಒಂದು ಚಲನೆ ಮಾತ್ರದಿಂದ ನಿನ್ನಾಜ್ಞೆಯಾದ ‘ನೀನಿರು’ ಜಾರಿಗೆ ಬಂದಿರುವುದಕ್ಕೂ ಮತ್ತು ದೇವರ ನಿಗೂಢ ರಹಸ್ಯವು ಪ್ರಕಟಗೊಂಡಿರುವುದಕ್ಕೂ; ಮತ್ತು ಎಲ್ಲಾ ಸೃಷ್ಟಿಗಳು ಅಸ್ತಿತ್ವಕ್ಕೆ ಬರುವಂತೆ ಕರೆ ನೀಡಿರುವುದಕ್ಕೂ ಹಾಗೂ ಎಲ್ಲಾ ಪ್ರಕಟಣೆಗಳನ್ನು ಭೂಮಿಯ ಮೇಲೆ ಕಳುಹಿಸಲಾಗಿದ್ದಕೂ ನಾನು ಸಾಕ್ಷಿ ನುಡಿಯುತ್ತೇನೆ.

ಇಷ್ಟೂ ಅಲ್ಲದೆ, ನಿನ್ನ ಸೌಂದರ್ಯದಿಂದಲೇ ಪೂಜಿಸಲ್ಪಟ್ಟವನ ಸೌಂದರ್ಯವು ಅನಾವರಣವಾಯಿತೆಂದೂ, ನಿನ್ನ ಮುಖದಿಂದಲೇ ಅಪೇಕ್ಷಿಸಲ್ಪಟ್ಟವನ ಮುಖಾರವಿಂದವು ಶೋಭಿತಗೊಂಡಿತೆಂದೂ, ಹಾಗೂ ಸೃಷ್ಟಿಗಳ ಮಧ್ಯೆ, ನಿನ್ನ ಭಕ್ತರು ವೈಭವದ ಶಿಖರಕ್ಕೇರುವ ಹಾಗೂ ದೈವ ಪ್ರತಿಭಟಕರು ಪಾತಾಳಕ್ಕಿಳಿಯುವ ನಿರ್ಣಯವು ನಿನ್ನ ಒಂದು ನುಡಿಯ ಮೂಲಕ ಆಯಿತೆಂಬುದಕ್ಕೂ ನಾನೇ ಸಾಕ್ಷಿಯಾಗಿದ್ದೇನೆ. ಯಾರು ನಿನ್ನನ್ನು ಅರಿತಿದ್ದಾನೋ ಅವನು ದೇವರನ್ನು ಅರಿತಿದ್ದಾನೆ, ಹಾಗೂ ಸಾನ್ನಿಧ್ಯವನ್ನು ಪಡೆದಿದ್ದಾನೆ, ಎಂಬುದಕ್ಕೆ ನಾನೇ ಸಾಕ್ಷಿ. ಆದ್ದರಿಂದ, ಯಾರು ನಿನ್ನಲ್ಲಿ ಮತ್ತು ನಿನ್ನ ಚಿಹ್ನೆಗಳಲ್ಲಿ ವಿಶ್ವಾಸವಿಟ್ಟಿರುವನೋ, ಹಾಗೂ ನಿನ್ನ ಸಾರ್ವಭೌಮತ್ವದ ಮುಂದೆ ವಿನೀತನಾಗಿರುವನೋ, ನಿನ್ನನ್ನು ಭೇಟಿ ಮಾಡುವ ಗೌರವವನ್ನು ಪಡೆದಿರುವನೋ, ಹಾಗೂ ನಿನ್ನ ಇಚ್ಛೆಯ ಆನಂದವನ್ನು ಪಡೆದಿರುವನೋ, ಹಾಗೂ ನಿನ್ನ ಪ್ರದಕ್ಷಿಣೆ ಮಾಡಿರುವನೋ, ಮತ್ತು ನಿನ್ನ ಸಿಂಹಾಸನದ ಮುಂದೆ ನಿಂತಿರುವನೋ ಅವನ ಧನ್ಯತೆಯೇ ಮಹಾನ್, ಯಾರು ನಿನ್ನನ್ನು ಉಲ್ಲಂಘಿಸಿರುವನೋ, ನಿನ್ನನ್ನು ಅಲ್ಲಗಳೆದಿರುವನೋ, ನಿನ್ನ ಚಿಹ್ನೆಗಳನ್ನು ನಿರಾಕರಿಸಿರುವನೋ, ನಿನ್ನ ಪ್ರಭುತ್ವವನ್ನು ವಿರೋಧಿಸಿರುವನೋ, ನಿನ್ನ ವಿರುದ್ಧಿ ಎದ್ದಿರುವನೋ, ನಿನ್ನ ಮುಖಾರವೈಂದದೆದುರು ಅಹಂಕಾರವನ್ನು ತೋರ್ಪಡಿಸಿರುವನೋ, ನಿನ್ನ ಸಾಕ್ಷ್ಯಾಧಾರಗಳನ್ನು ಖಂಡಿಸಿರುವನೋ, ನಿನ್ನ ಶಾಸನ ಮತ್ತು ನಿನ್ನ ಸಾಮ್ರಾಜ್ಯದಿಂದ ದೂರ ಸರಿದಿರುವನೋ, ನಿನ್ನ ಪವಿತ್ರ ಶಾಸನಗಳಲ್ಲಿ ನಿನ್ನ ಆಜ್ಞೆಯ ಬೆರಳುಗಳಿಂದ ಕೊರೆಯಲ್ಪಟ್ಟ ದೈವಪ್ರತಿಭಟಕರಲ್ಲಿ ಯಾರ ಹೆಸರು ಎಣಿಸಲ್ಪಟ್ಟಿದೆಯೋ ಅಂಥವರಿಗೆ ಸಂಕಟಗಳು ಬರಲಿ.

ಓ ನನ್ನ ದೇವರೇ ಮತ್ತು ನನ್ನ ಪ್ರಿಯತಮನೇ, ನಿನ್ನ ಕರುಣೆಯ ಬಲಗೈಯಿಂದ ಮತ್ತು ನಿನ್ನ ಪ್ರೇಮಪೂರಿತ ದಯೆಯಿಂದ ನಿನ್ನ ಅನುಗ್ರಹಗಳ ಉಸಿರಿನ ತಂಗಾಳಿಯನ್ನು ನನ್ನ ಮೇಲೆ ಹರಿಸು ಅದರಿಂದ ಅವು ನನ್ನನ್ನು ನನ್ನಿಂದ ಮತ್ತು ಈ ಲೋಕದಿಂದ ದೂರ ಮಾಡಿ ನಿನ್ನ ಸಾಮೀಪ್ಯ ಹಾಗೂ ನಿನ್ನ ಸಾನ್ನಿಧ್ಯದ ಆಸ್ಥಾನಗಳೆಡೆ ಕರೆದೊಯ್ಯಲಿ, ನಿನ್ನಿಚ್ಛೆಯಂತೆಯೇ ಮಾಡುವ ಸಾಮಥ್ರ್ಯವುಳ್ಳವನು ನೀನೇ. ನಿಜವಾಗಿಯೂ, ನೀನು ಎಲ್ಲಾ ವಸ್ತುಗಳ ಮೇಲೂ ಶ್ರೇಷ್ಠನಾಗಿದ್ದೀಯೇ. ದೇವರ ಸ್ಮರಣೆ, ಆತನ ಪ್ರಶಂಸೆ, ದೇವರ ಜ್ಯೋತಿ ಹಾಗೂ ಆತನ ಭವ್ಯತೆಯು ಆತನ ಸೌಂದರ್ಯನಾಗಿರುವ ನಿನ್ನ ಮೇಲಿರಲಿ! ಸೃಷ್ಠಿಯ ಕಣ್ಣುಗಳು ದಬ್ಬಾಳಿಕೆಗೊಳಪಟ್ಟ ನಿನ್ನಂಥವವನ್ನು ಎಂದೂ ನೋಡಿರಲಿಕ್ಕಿಲ್ಲ ಎಂಬುದಕ್ಕೆ ನಾನೇ ಸಾಕ್ಶಿ. ನಿನ್ನ ಬಾಳಿನ ಎಲ್ಲಾ ದಿನಗಳಲ್ಲೂ ನೀನು ಯಾತನೆಗಳ ಸಾಗರದ ತರದಲ್ಲಿ ಮುಳುಗಿದ್ದೆ. ಒಂದು ಸಮಯದಲ್ಲಿ ನೀನು ನಿನ್ನ ಶತ್ರುಗಳ ಖಡ್ಗಗಳಿಂದ ಬೆದರಿಸಲ್ಪಟ್ಟಿದ್ದೆ. ಇಷ್ಟೆಲ್ಲಾ ಆದರೂ, ನಿನಗೆ ಸರ್ವಜ್ಞ ಹಾಗೂ ಸರ್ವಪ್ರಜ್ಞನು ವಿಧಿಸಲ್ಪಟ್ಟಿರುವುದನ್ನು ಮನುಷ್ಯರೆಲ್ಲರೂ ಆಚರಿಸುವಂತೆ ನೀನು ಆಜ್ಞೆ ಮಾಡಿರುವೆ.
ನನ್ನ ಚೈತನ್ಯವು ನೀನನುಭವಿಸಿದ ನಿಂದನೆಗೆ ಅಹುತಿಯಾಗಲಿ ಮತ್ತು ನನ್ನ ಆತ್ಮವು ನೀನು ಸಹಿಸಿರುವ ವಿಪತ್ತುಗಳ ವಿಮುಕ್ತಿಯ ಬೆಳೆಯಾಗಲಿ. ನಿನ್ನಿಂದ ಹಾಗೂ ನಿನ್ನ ಮುಖಾರವಿಂದದ ಪ್ರಕಾಶದ ವೈಭವದಿಂದ ಯಾರ ಮುಖಗಳು ಪ್ರಕಾಶಿತಗೊಂಡವೋ, ಅವರಿಂದ ಹಾಗೂ ಯಾರು ನಿನ್ನ ಪ್ರೀತಿಗೋಸ್ಕರವಾಗಿ ಅವರಿಗೆ ಆಜ್ಞಾಪಿಸಿರುವುದನ್ನೆಲ್ಲಾ ಆಚರಿಸುವರೋ ಅವರಿಂದ, ನೀನು ಮತ್ತು ನಿನ್ನ ಸೃಷ್ಟಿಗಳ ನಡುವೆ ಬಂದಿರುವ ಪರದೆಗಳನ್ನು ತೆಗೆದುಹಾಕುವಂತೆಯೂ ಹಾಗೂ ಈ ಪ್ರಪಂಚ ಮತ್ತು ಮುಂದಿನ ಪ್ರಪಂಚದ ಒಳ್ಳೆಯದನ್ನು ದಯಪಾಲಿಸೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ನೀನು ಸತ್ಯವಾಗಿಯೂ ಸರ್ವಶಕ್ತನೂ, ಪರಮೋತ್ತಮನೂ, ಸಕಲ ವೈಭವಪೂರಿತನೂ, ಸದಾ ಕ್ಷಮಾಶೀಲನೂ, ಮಹಾಕೃಪಾಕರನೂ ಆಗಿರುವೆ. ಓ ಪ್ರಭುವೇ, ನನ್ನ ದೇವರೇ, ದಿವ್ಯ ಕಲ್ಪವೃಕ್ಷ ಮತ್ತದರ ಎಲೆಗಳು, ಮತ್ತದರ ಟೊಂಗೆಗಳು, ಮತ್ತದರ ರೆಂಬೆಗಳು, ಮತ್ತದರ ಕಾಂಡಗಳು, ಮತ್ತದರ ಉಪಶಾಖೆಗಳು ನಿನ್ನ ಮಹಾಉಪಾಧಿಗಳಿರುವ ತನಕ ಹಾಗೂ ನಿನ್ನ ಪ್ರಭಾವಶಾಲಿ ಗುಣಲಕ್ಷಣಗಳಿರುವ ತನಕ ಬಾಳಲೆಂದು ಹರಸು. ಆಕ್ರಮಣಕಾರರ ಹಾವಳಿ ಮತ್ತು ನಿರಂಕುಶಾಧಿಕಾರವುಳ್ಳ ಅತಿಥೇಯರಿಂದ ಅದನ್ನು ರಕ್ಷಿಸು. ನೀನು, ಸತ್ಯವಾಗಿಯೂ, ಪರಾಕ್ರಮಶಾಲಿಯೂ, ಮಹಾಬಲನೂ ಆಗಿರುವೆ. ನಿನ್ನನ್ನು ಪಡೆದ ನಿನ್ನ ಸೇವಕರನ್ನು ಹಾಗೂ ನಿನ್ನ ಸೇವಕಿಯರನ್ನು ಹರಸು, ಓ ಪ್ರಭುವೇ ನನ್ನ ದೇವರೇ, ಸತ್ಯವಾಗಿಯೂ ನೀನು ಸರ್ವ ಉದಾರಿ, ನಿನ್ನ ಅನುಗ್ರಹ ಅಪಾರ. ಸರ್ವಕ್ಷಮಾಶೀಲನೂ ಪರಮದಾನಿಯೂ ಆದ ನೀನಲ್ಲದೆ ಬೇರೆ ದೇವರಿಲ್ಲ.

*(ಟೆಹರಾನಿನ ಸಿಯಾಚಾಲ್ ಕಪ್ಪುಗುಂಡಿಯಲ್ಲಿ ಬಂಧಿತ ಬಾಬಿಗಳು ಪಠಿಸುತ್ತಿದ್ದ ಮಂತ್ರ: ದೇವರು ನನಗೆ ತೃಪ್ತಿಪಡಿಸುವಷ್ಟಿದ್ದಾನೆ; ನಿಶ್ಚಯವಾಗಿಯೂ, ಆತನು ಸರ್ವಸಂತೃಪ್ತದಾತನು! ವಿಶ್ವಾಸವಿರುವವರು ಆತನಲ್ಲಿ ವಿಶ್ವಾಸವನ್ನಿಡಲಿ.

*(ಮಾರ್ಚ್ 21ನೇ ತಾರೀಖು ನೌರೂeóï ಇದು ಬಹಾಯಿ ವರ್ಷದ ಪ್ರಥಮ ದಿನ ಇದು ಸಂಭ್ರವದ ದಿನವಾಗಿದೆ.) ಓ ನನ್ನ ಪರಮಾತ್ಮನೇ, ನೀನು ಧನ್ಯ. ನಿನ್ನ ಪ್ರೀತ್ಯರ್ಥವಾಗಿ ಹಾಗೂ ನಿನಗೆ ಅಸಹ್ಯವೆನಿಸುವ ಎಲ್ಲ ವಿಚಾರಗಳಿಂದಲೂ ದೂರದಿಂದಿರಲು ಸಂಕಲ್ಪಿಸಿ ಉಪವಾಸ ಮಾಡಿದವರಿಗೋಸ್ಕರ ನೀನು ನೌ-ರೂeóï ಸಂಭ್ರಮದ ಹಬ್ಬವನ್ನು ಗೊತ್ತುಪಡಿಸಿರುವೆ. ನಿನ್ನ ಪ್ರೀತಿಯ ಅಗ್ನಿ ಮತ್ತು ಉಪವಾಸದಿಂದ ಉತ್ಪನ್ನವಾದ ಶಾಖ ನಿನ್ನ ಧ್ಯೇಯೋದ್ದೇಶಗಳ ಸಲುವಾಗಿ ಧಗಧಗಿಸುವಂತೆ ಮಾಡಲಿ. ಅದು ಮಾತ್ರವಲ್ಲ, ಅವು ನಿನ್ನನ್ನು ಸ್ತುತಿಗೈಯುವುದರಲ್ಲಿ ಹಾಗೂ ಸ್ಮರಣೆ ಮಾಡುವುದರಲ್ಲಿ ನಿರತವಾಗುವಂತೆ ಕೃಪೆ ಮಾಡು, ಓ ಪ್ರಭುವೇ, ನೀನೇ ವಿಧಾಯಕಪಡಿಸಿದ ಉಪವಾಸದ ಆಭರಣದಿಂದ ಅವರನ್ನು ಸಿಂಗರಿಸಿರುವೆಯಾದ ಕಾರಣ ನಿನ್ನ ದಯೆ ಹಾಗೂ ಔದಾರ್ಯದ ಉಪಕಾರದಿಂದಲೂ ಮನ್ನಣೆಯಿಂದಲೂ ಕೂಡಿದಾ ಆಭರಣದಿಂದ ಸಹ ಅಲಂಕರಿಸುವವನಾಗು. ಮಾನವರ ನಡವಳಿಕೆಯೆಲ್ಲ ನಿನ್ನ ಸಮಾಧಾನ ಹಾಗೂ ಸಂತೋಷಚಿತ್ತದ ಅವಲಂಬನೆಯಾಗುತ್ತದೆ. ಅಷ್ಟೇ ಅಲ್ಲ, ನಿನ್ನ ಆಜ್ಞೆಯ ಆಧಾರದ ಮೇಲೂ ನಿಂತಿರುತ್ತದೆ. ಯಾರು ಉಪವಾಸವನ್ನು ಆಚರಿಸಿ, ಸತ್ಯಸಂಧನಾಗಿ ಮುಕ್ತಾಯಗೊಳಿಸುವನೋ ಅಂಥವನು ಚಿರಕಾಲದಿಂದಲೂ ಉಪವಾಸ ಮಾಡುತ್ತಿರುವವರ ಗುಂಪಿಗೆ ಸೇರಿಸಲ್ಪಡುವನು. ಅದಿಲ್ಲದೆ ನಿನ್ನ ಭಾವನೆಯಲ್ಲಿ ಯಾವನು ಉಪವಾಸವನ್ನು ಆಚರಿಸಿ ನಿಲ್ಲಿಸಿ ಬಿಡುವನೋ ಅವನು ನಿನ್ನ ಪವಿತ್ರ ಉದ್ದಿಶ್ಯಗಳಿಗೆ ಕಳಂಕ ತಂದವನೆಂದು ಪರಿಗಣಿಸಲ್ಪಡುವನು. ಈ ಜೀವಂತ ಚಿಲುಮೆಯ ಪರಿಶುದ್ಧವಾದ ಜಲದಿಂದ ಅವನು ಹೊರದೂಡಲ್ಪಡುವನು. ನಿನ್ನ ಮೂಲಕವೇ ನಿನ್ನ ಪ್ರಶಂಸನೀಯ ಕರ್ತವ್ಯ ಪ್ರಕಟವಾಗಿದೆ. ನಿನ್ನ ಆಜ್ಞೆಯ ಧ್ವಜವನ್ನೂ ಹಾರಿಸಿದೆ. ಇದನ್ನು ನಿನ್ನ ಆಜ್ಞಾಪಾಲಕರಿಗೆ ತಿಳಿಸು ಪ್ರಭುವೇ. ಎಲ್ಲ ವಸ್ತುಗಳ ಪವಿತ್ರತೆಯು ನಿನ್ನ ಇಚ್ಛೆ ಹಾಗೂ ಆದೇಶವನ್ನು ಅವಲಂಬಿಸುವುದೆಂದೂ ಅವರಿಗೆ ಗೊತ್ತು ಪಡಿಸು. ಅವರ ಪ್ರತಿ ಆಚಾರವೂ ನಿನ್ನ ಅನುಮತಿ ಮತ್ತು ಸಂತೋಷದ ವಿಧಿ ಬದ್ಧವಾಗಿದೆ. ಮಾನವರ ನಡವಳಿಕೆಗಳೆಲ್ಲವೂ ನಿನ್ನ ಸಮ್ಮತಿ ಮತ್ತು ಆಜ್ಞೆಗೆ ಅನುಸಾರವಾಗಿ ಉಳ್ಳದ್ದೆಂದು ಅಂಗೀಕರಿಸಬಹುದು. ಇದು ಅವರಿಗೆ ಗೊತ್ತಾಗುವಂತೆ ಮಾಡು. ಈ ದಿನಗಳಲ್ಲಿ ನಿನ್ನ ಸೌಂದರ್ಯದ ನೆಲೆಯಿಂದ ಯಾವುದೂ ಅವರನ್ನು ಮರೆಮಾಚಲು ಸಾಧ್ಯವಿಲ್ಲವೆಂದು ಅವರಿಗೆ ಸ್ಪಷ್ಟಪಡಿಸು. ಕ್ರಿಸ್ತ ಈ ದಿನಗಳಲ್ಲಿ ಹೀಗೆ ಹೇಳಿದ : “ಎಲ್ಲ ರಾಜ್ಯಗಳೂ ನಿನ್ನವು “ಓ ಚೈತನ್ಯ ಕರ್ತನೇ” ನಿನ್ನ ಮಿತ್ರ ಮೊಹಮ್ಮದ್ ಹೀಗೆ ಸಾರಿದ: “ ಓ ಉತ್ತಮೋತ್ತಮ ಪ್ರೀತಿಗೆ ಪಾತ್ರನಾದವನೇ, ನಿನ್ನ ಸೌಂದರ್ಯವನ್ನು ಬಹಿರಂಗಪಡಿಸಿರುವೆ. ನಿನ್ನ ವಿಶ್ವಾಸ ಪಾತ್ರರಿಗೆ, ಅತಿ ವೈಭವದ ನಿನ್ನ ಸಾಕ್ಷಾತ್ಕಾರದಲ್ಲಿ ಸ್ಥಾನ ಗಳಿಸುವ ಮಾರ್ಗವಾವುದು ಎಂಬುದನ್ನು ಖಚಿತಪಡಿಸಿರುವೆ. ಹೀಗೆ ನಿನ್ನ ಹೊರತು ಮಿಕ್ಕೆಲ್ಲ ವಸ್ತುಗಳಿಂದಲೂ ಬಾಹಿರರಾದವರನ್ನು ಬಿಟ್ಟು ಉಳಿದವರೆಲ್ಲ ದುಃಖಿಗಳಾಗಿರುವರು. ಯಾರು ನಿನ್ನ ಸಾಕ್ಷಾತ್ಕಾರದ ದರ್ಶನಕರ್ತನೋ ಮತ್ತು ನಿನ್ನ ಸುಗುಣಗಳ ಪ್ರಕಾಶಕನೋ ಅಂಥವನತ್ತ ಅವರು ತಮ್ಮ ದೃಷ್ಟಿಯನ್ನು ನೆಟ್ಟಿರುವರು.” ಯಾವನು ನಿನ್ನ ಶಾಖೆಯಂತಿರುವನೋ ಅಲ್ಲದೆ ನಿನ್ನ ಒಡನಾಡಿಯಂತಿರುವನೋ, ಓ ಸ್ವಾಮಿಯೇ, ಅವನು ಈ ದಿವಸ ತನ್ನ ಉಪವಾಸವನ್ನು ಮುಕ್ತಾಯಗೊಳಿಸಿರುವನು. ನಿನ್ನ ಸಮಕ್ಷಮದಲ್ಲಿಯೇ, ನಿನ್ನನ್ನು ಸಂತೋಷಗೊಳಿಸಲು ಕೈಗೊಂಡ ಇದು ಮುಕ್ತಾಯವಾಗಿದೆ. ಅವನಿಗೂ, ಅವರಿಗೂ, ಅಲ್ಲದೆ ಈ ದಿನಗಳಲ್ಲಿ ನಿನ್ನ ಸಮ್ಮುಖದಲ್ಲಿ ನಿನ್ನ ವಿಧಿವತ್ತಾದ ಸತ್ಕರ್ಮಗಳನ್ನು ನಡೆಸಿದವರೆಲ್ಲರಿಗೂ ಗೌರವಿಸು. ಆತನ ಇಂದಿನ ಜನ್ಮದಲ್ಲಿ ಹಾಗೂ ಭವಿಷ್ಯ ಜನ್ಮಗಳಲ್ಲಿ ಅನುಕೂಲಿಸುವಂಥವುಗಳನ್ನು ಒದಗಿಸು. ವಾಸ್ತವಕ್ಕೂ ನೀನೇ ಎಲ್ಲವನ್ನೂ ಬಲ್ಲವ, ಸರ್ವಜ್ಞ.
. ನಿನ್ನನ್ನು ಕೊಂಡಾಡಲಿ, ಓ ಪ್ರಭುವೇ ನನ್ನ ದೇವರೇ! ಯಾರನ್ನು ನೀನು ನಿನ್ನ ಚಿರಂತನ ಸಾರ್ವಭೌಮತೆಯ ಶಕ್ತಿಯ ಮೂಲಕ ಉನ್ನತವಾಗಿರಿಸಿರುವೆಯೋ ಅವನನ್ನು ಕಡೆಗಣಿಸದಿರು, ಯಾರನ್ನು ನಿನ್ನ ನಿತ್ಯತೆಯ ಪೂಜಾ ಸ್ಥಾನವನ್ನು ಸೇರುವಂತೆ ಮಾಡಿರುವೆಯೋ ಅವರನ್ನು ಕಡೆಗಣಿಸದಿರು, ಯಾರನ್ನು ನಿನ್ನ ನಿತ್ಯತೆಯ ಪೂಜಾ ಸ್ಥಾನವನ್ನು ಸೇರುವಂತೆ ಮಾಡಿರುವೆಯೋ ಅವರನ್ನು ನಿನ್ನಿಂದ ಬಹುದೂರಕ್ಕೆ ಸ್ಥಳಾಂತರಿಸದಿರು. ಓ ನನ್ನ ದೇವರೇ, ನಿನ್ನ ಪ್ರಭುತ್ವದಿಂದ ನಿನ್ನಾಶ್ರಯಿಸಿದವರನ್ನು ನೀನು ಕೈ ಬಿಡುವೆಯಾ?” ಓ ನನ್ನ ಆಕಾಂಕ್ಷೆಯೇ, ಯಾರಿಗೆ ನೀನೊಬ್ಬ ಆಶ್ರಯದಾತನಾಗಿರುವೆಯೋ, ಅವನನ್ನು ನಿನ್ನಿಂದ ದೂರ ಸರಿಸುವೆಯಾ? ಯಾರನ್ನು ನೀನು ಮೇಲೆತ್ತಿರುವೆಯೋ ಅವನನ್ನು ಕೆಳಕ್ಕಿಳಿಸುವೆಯಾ ಅಥವಾ ನಿನ್ನ ಸ್ಮರಣೆ ಮಾಡಲು ಶಕ್ತರನ್ನಾಗಿಸಿದವರನ್ನು ಮರೆತುಬಿಡುವೆಯಾ? ನಿನ್ನ ಸ್ತೋತ್ರವಾಗಲಿ, ಓ ದೇವರೇ, ನಿನ್ನನ್ನು ಅಪಾರವಾಗಿ ಕೊಂಡಾಡಲಿ! ಅನಾದಿ ಕಾಲದಿಂದಲೂ ಇಡೀ ಸೃಷ್ಟಿಯ ರಾಜನು ಹಾಗೂ ಅದರ ಪ್ರಧಾನ ಚಾಲಕನೂ ನೀನೇ ಆಗಿರುವೆ, ಮತ್ತು ನೀನು ಸೃಷ್ಟಿಸಿರುವ ಎಲ್ಲಾ ವಸ್ತುಗಳ ಅಮರ ಪ್ರಭು ಮತ್ತು ವಿಧಾಯಕನಾಗಿ ನೀನೇ ಉಳಿಯುವೆ. ನೀನು ಸ್ತುತಿಸಲ್ಪಡಲಿ, ಓ ನನ್ನ ದೇವರೇ! ನೀನು ನಿನ್ನ ಸೇವಕರಿಗೆ ಕರುಣೆ ತೋರಿಸುವುದನ್ನು ನಿಲ್ಲಿಸಿದ್ದಲ್ಲಿ ಅವರಿಗೆ ಕರುಣೆಯನ್ನು ತೋರುವವರಾರು, ಮತ್ತು ನಿನ್ನ ಪ್ರೀತಿಪಾತ್ರರಿಗೆ ನೀನು ಸಹಾಯ ನಿರಾಕರಿಸಿದ್ದಲ್ಲಿ, ಅವರಿಗೆ ನೆರವು ನೀಡುವವರಾರಿಹರು? ಸ್ತುತಿಸಲ್ಪಟ್ಟಿದ್ದೀಯೇ, ನೀನು ಅಪಾರವಾಗಿ ಕೊಂಡಾಡಲ್ಪಟ್ಟಿದ್ದಿಯೇ! ನೀನು ನಿನ್ನ ಸತ್ಯತೆಯಲ್ಲಿ ಆರಾಧ್ಯನಾಗಿರುವೆ ಮತ್ತು ನಿಜವಾಗಿಯೂ ನಾವೆಲ್ಲರೂ ನಿನ್ನನ್ನು ಆರಾಧಿಸುವೆವು; ನಿನ್ನ ನ್ಯಾಯದಲ್ಲಿ ನೀನು ವ್ಯಕ್ತವಾಗಿರುವೆ ಮತ್ತು ನಿನ್ನನ್ನು ನಿಜವಾಗಿ ನಾವೆಲ್ಲರೂ ಸಾಕ್ಷೀಕರಿಸುವೆವು. ಸತ್ಯವಾಗಿಯೂ ನಿನ್ನ ಕೃಪೆಯಲ್ಲಿ ನೀನು ಪ್ರಿಯತಮನಾಗಿರುವೆ. ಆಪತ್ತಿನಲ್ಲಿ ಸಹಾಯಕನೂ, ಸ್ವಯಮಾಧಾರನೂ ಆದ ನೀನಲ್ಲದೆ ಬೇರೆ ದೇವರಿಲ್ಲ.
ನನ್ನ ಪರಮಾತ್ಮ, ಓ ನನ್ನ ಪರಮಾತ್ಮ, ನೀನೇ ನನ್ನ ಆಶಾದೀವಿಗೆ, ಪ್ರೇಮಿ, ನನ್ನ ಗುರಿ, ಇಚ್ಛಾಪೂರೈಕೆಯ ಮೂರ್ತಿ. ಅತಿ ನಮ್ರತೆಯಿಂದ, ಪೂರ್ಣತನ್ಮಯ ಭಾವದಿಂದ ಪ್ರಾರ್ಥಿಸುವುದಿಷ್ಟೆ - ನಿನ್ನ ಆಸರೆಯ ಜಗತ್ತಿನಲ್ಲಿ ನನ್ನನ್ನು ಪ್ರೇಮದ ಶಿಖರವನ್ನಾಗಿ ನಿರ್ಮಿಸು. ನಿನ್ನ ಸೃಷ್ಟಿಯ ಜೀವಿಗಳಲ್ಲಿ ನನ್ನನ್ನು ನಿನ್ನ ಜ್ಞಾನದೀವಿಗೆಯಂತೆ ಮಾಡು. ನಿನ್ನ ಕೃಪೆಯ ಧ್ವಜವನ್ನಾಗಿ ಏರಿಸು. ನಿನ್ನ ಹೊರತು ಮತ್ತೆಲ್ಲ ವಸ್ತುಗಳಿಂದಲೂ ದೂರವಿರುವ, ಈ ಪ್ರಪಂಚದ ಎಲ್ಲ ವಸ್ತುಗಳಿಂದಲೂ ಅತೀತರಾಗಿ ಪವಿತ್ರವಾಗಿರುವ ಹಾಗೂ ಶಂಕೆಗೊಳಪಟ್ಟವರ ದೋಷದಿಂದ ಹೊರತಾಗುಳ್ಳ ನಿನ್ನ ಭಕ್ತರಲ್ಲಿ ನನ್ನನ್ನು ಒಬ್ಬನನ್ನಾಗಿ ಸೇರಿಸಿಕೋ. ನಿನ್ನ ಜಗತ್ತಿನ ಭಾವನಾತ್ಮಕ ಹೆಗ್ಗಳಿಕೆಯ ಮೂಲಕ ಹೃದಯ ಹಿರಿಹಿಗ್ಗಲಿ. ನಿನ್ನ ಸರ್ವಾಂತರ್ಯಾಮಿತ್ವದಿಂಡ ಒಂದರ ಮೇಲೊಂದರಂತೆ ಎರಗುವ ಯಶಸ್ಸಿನ ತರಂಗಗಳನ್ನು ಕಾಣುವಂತೆ ನನ್ನ ದೃಷ್ಟಿಯನ್ನು ಬೆಳಗಿಸು. ನೀನು ಸರ್ವಸಮರ್ಥ, ಪ್ರಬಲ, ಅಜೇಯ
*(ಅಧಿಕ ಮಾಸದ ದಿವಸಗಳಲ್ಲಿ ಫೆಬ್ರವರಿ 26ರಿಂದ ಮಾರ್ಚ್ 1ರ ತನಕ ಉಪವಾಸ, ದಾನ, ಧರ್ಮ ಹಾಗೂ ಸತ್ಕಾರ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು) ನನ್ನ ದೇವರೇ, ನನ್ನ ಅಗ್ನಿ ಮತ್ತು ಜ್ಯೋತಿಯೇ, ನಿನ್ನ ಗ್ರಂಥವಾದ ಅಯ್ಯಾಮ್ –ಇ-ಹಾ (ಹಾ ದಿವಸಗಳು ಅಧಿಕ ಮಾಸದ ದಿನಗಳು)ದಲ್ಲಿ ಹೇಳಿರುವ ದಿನಗಳು ಆರಂಭವಾಗಿವೆ. ವೈಭವದ ದೊರೆಯೆನಿಸಿರುವ ಎಲ್ಲಾ ಜೀವಿಗಳಿಗೂ ಆದೇಶವಾಗಿರುವಂತೆ ಆಚರಿಸುವ ದಿನಗಳೂ ಸನ್ನಿಹಿತವಾಗುತ್ತಿವೆ. ಓ ಪ್ರಭುವೇ, ನಿನ್ನಲ್ಲಿ ನಾನು ಬೇಡುವುದಿಷ್ಟೆ ಈ ದಿನಗಳಲ್ಲಿ, ನಿನ್ನ ಅಜ್ಞಾಧಾರಕರಾಗಿರುವವರೆಲ್ಲ. ನಿನ್ನ ಮಾರ್ಗಾನುವರ್ತಿಗಳಾಗಿ ಇರುವವರೆಲ್ಲ ನಿನ್ನ ವ್ಯಾಪ್ತಿಗೆ ಒಳಪಡುವಂತೆ ಅವರ ಆತ್ಮಗಳಿಗೆ ಸ್ಥಾನ ಕಲ್ಪಿಸು. ನಿನ್ನ ದಿವ್ಯ ಜ್ಯೋತಿಯ ಪ್ರಭಾವವನ್ನು ಅವರಿಗೆ ಕರುಣಿಸು. ಓ ಸ್ವಾಮಿಯೇ, ಇವರೆಲ್ಲ ನಿನ್ನ ಸೇವಕರು ನಿನ್ನ ಉಪದೇಶಗಳನ್ನು ತ್ಯಜಿಸುವಂಥ ಯಾವ ಕೆಟ್ಟ ಯೋಚನೆಯೂ ಇವರ ಬಳಿ ಸುಳಿದಿಲ್ಲ. ನಿನ್ನ ಧ್ಯೇಯಕ್ಕಾಗಿ ಶರಣಾಗಿರುವರು. ನಿನ್ನ ಆದೇಶಗಳನ್ನು ಮನಸಾರೆ ಅಂಗೀಕರಿಸಿರುವರು. ನಿನ್ನ ಗುಣಕ್ಕನುಸಾರವಾಗಿ ನಿರ್ಧಾರ ಕೈಗೊಂಡಿರುವರು. ಅವರ ಮುಂದಿಟ್ಟಿರುವ ವಿಧಿಗಳನ್ನು ಅಚರಿಸುತ್ತಿರುವರು. ನೀನು ವಿಧಾಯಕಗೊಳಿಸಿರುವ ನೀತಿಯನ್ನು ಪಾಲಿಸುತ್ತಿರುವರು. ಓ ದೇವರೇ, ನಿನ್ನ ಧರ್ಮಗ್ರಂಥದಲ್ಲಿ ನಿರೂಪಿಸಿರುವುದನ್ನೆಲ್ಲ ಅವರು ಒಪ್ಪಿರುವುದಲ್ಲದೆ, ಮಾನ್ಯ ಮಾಡಿರುವುದನ್ನೂ ನೀನು ಕಂಡಿರುವೆ. ಪ್ರಭುವೇ, ನಿನ್ನ ಅಮೃತ ಹಸ್ತದಿಂಡ ನಿನ್ನ ಅನಂತಕಾರಕ ಜಲವನ್ನು ನೀಡಿ ಅವರು ಪಾನ ಮಾಡುವಂತೆ ಕೃಪೆತೋರು. ಅವರಿಗಾಗಿ ವಿಧಿಸಿರುವ ಪ್ರತಿಫಲವನ್ನು ಸ್ಪಷ್ಟಪಡಿಸು. ನಿನ್ನ ಸಮಕ್ಷಮದಿಂದ ಹಾಗೂ ಸಮಾಗಮದಿಂದ ಅವರು ಹರ್ಷೋನ್ಮಾದರಾಗಲಿ. ಓ ದೊರೆಗಳ ದೊರೆಯೇ, ದೀನದಲಿತರ ಸಹಾನುಭೂತಿಪರನೇ, ಅವರಿಗೆ ಈ ಪ್ರಪಂಚದ ಹಾಗೂ ಮುಂದಿನ ಪ್ರಪಂಚದ ಒಳ್ಳೆಯದೆಲ್ಲವನ್ನೂ ಕರುಣಿಸೆಂದು ಸೆರಗೊಡ್ಡಿ ಬೇಡುವೆ. ನಿನ್ನ ಸುತ್ತ ಯಾರು ಇದ್ದು ಅನಸರಿಸುವರೋ ಅಂಥವರೊಡನೆ ನಿನ್ನ ಜೀವಿಗಳು ಬೆರೆಯುವಂತೆ ಮಾಡು. ನಿಜಕ್ಕೂ ನೀನು ಮಹಾಶಕ್ತಿವಂತ, ಸರ್ವಜ್ಞಾನಿ, ಎಲ್ಲ ಬಲ್ಲವನು.
*(ಅಲಾ ಔನ್ನತ್ಯ ತಿಂಗಳಲ್ಲಿ ಉಪವಾಸ ವ್ರತವು ಮಾರ್ಚ್ ತಿಂಗಳ 2ರಿಂದ 20ರ ತನಕ ಒಳಗೊಂಡಿರುತ್ತದೆ. ಈ ದಿನಗಳಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ ಸಮಯದಲ್ಲಿ ಯಾವುದೇ ರೀತಿಯ ಆಹಾರವಾಗಲೀ, ಪಾನೀಯವಾಗಲೀ ಸೇವಿಸಕೂಡುದು. ಇದು ಪ್ರಾರ್ಥನೆ ಮತ್ತು ಆಧ್ಯಾತ್ಮಿಕ ಪುನಃಶ್ಚೇತನದ ಸಮಯವಾಗಿದೆ. 15 ವರ್ಷಕ್ಕಿಂತ ಕಮ್ಮಿ ವಯಸ್ಸುಳ್ಳುವರು, ಪ್ರಯಾಣಿಕರು, ರೋಗಿಗಳು, ಗರ್ಭಿಣಿ ಮತ್ತು ಮೊಲೆಯೂಡುವ ತಾಯಂದಿರು ಉಪವಾಸದಿಂದ ವಿನಾಯ್ತಿ ಪಡೆದುಕೊಂಡಿರುವರು) ಓ ಪ್ರಭು ನನ್ನ ದೇವರೇ, ನೀನು ಪ್ರಶಂಸನೀಯ! ಈ ನಿನ್ನ ಸಾಕ್ಷಾತ್ಕಾರದಿಂದ ಕತ್ತಲು ಬೆಳಕಾಗಿ ತನ್ಮೂಲಕ ದೇವಾಲಯ ನಿರ್ಮಿತವಾಗಿ ಶಾಸನ ಪ್ರಕಟವಾಯಿತೋ ಮತ್ತು ಉಪದೇಶಗಳ ಪತ್ರಾವಳಿ ತೆರೆಯಲ್ಪಟ್ಟಿರುವುದೋ, ಈ ಸಂದರ್ಭದಲ್ಲಿ ನನ್ನ ಹಾಗೂ ಅವರನ್ನು ನಿನ್ನ ಅಚಿಂತ್ಯವಾದ ವೈಭವೋಪೇತ ಸ್ವರ್ಗಕ್ಕೆ ಏರುವಂತೆ ಮಾಡಬೇಕೆಂದೂ, ಅನುಮಾನವುಳ್ಳವರು ನಿನ್ನ ಪೂಜಾ ಮಂದಿರವನ್ನು ಪ್ರವೇಶಿಸಲು ಅಡ್ಡಿ ತರುವವರ ಸಂಶಯಗಳ ಕಳಂಕವನ್ನು ತೊಡೆದುಹಾಕಬೇಕೆಂದೂ ಪ್ರಾರ್ಥಿಸುವೆ. ಓ ಪ್ರಭುವೇ, ನಿನ್ನ ಪ್ರೀತಿಯ ಸೂತ್ರಕ್ಕೆ ದೃಢವಾಗಿ ಅಂಟಿಕೊಂಡಿರುವವನ್ನು ನಾನೊಬ್ಬ, ನಿನ್ನ ದಯೆ ಹಾಗೂ ಉಪಕಾರಕ್ಕಾಗಿ ಕಾತುರತೆಯಿಂದಿರುವವನೂ ಹೌದು. ನನಗೂ ಹಾಗೂ ನನ್ನ ಪ್ರೀತಿಗೆ ಪಾತ್ರರಾದವರಿಗೆಲ್ಲ ಈ ಜಗತ್ತಿನ ಮತ್ತು ಭಾವೀ ಜಗತ್ತಿನ ಎಲ್ಲ ಒಳ್ಳೆಯದನ್ನೂ ಅನುಗ್ರಹಿಸು. ನಿನ್ನ ಅಪ್ತ ಜೀವಿಗಳಿಗೆ ಸಲ್ಲಿಸಿರುವ ಗುಪ್ತ ವರವನ್ನು ಅವರಿಗೆ ಕೊಡುವವನಾಗು. ಸ್ವಾಮಿಯೇ, ನೀನು ನಿನ್ನ ಸೇವಕರು ಉಪವಾಸವನ್ನು ಆಚರಿಸಬೇಕೆಂದು ವಿಧಾಯಕ ಮಾಡಿರುವ ದಿನಗಳಿವು. ಉಪವಾಸವನ್ನು ನಿನ್ನ ಪ್ರೀತ್ಯರ್ಥವಾಗಿ ಹಾಗೂ ನಿನ್ನ ಹೊರತು ಎಲ್ಲ ವಿಚಾರಗಳಿಂದಲೂ ಸಂಪೂರ್ಣ ಅಲಿಪ್ತನಾಗಿ ನಡೆದುಕೊಳ್ಳುತ್ತಾ ಆಚರಿಸುವವನೇ ಧನ್ಯ. ದೇವರೇ, ನನಗೂ ಮತ್ತು ಅವರಿಗೂ ನಿನ್ನ ಆದೇಶವನ್ನು ಪಾಲಿಸುವಂತೆಯೂ, ನಿನ್ನ ಅನುಚರರಾಗಿರುವಂತೆಯೂ ಸಹಾಯವೆಸಗು. ನಿಜಕ್ಕೂ ನೀನು ಬಯಸಿದುದನ್ನು ನಡೆಸಿಕೊಡಲು ಸಮರ್ಥನಾಗಿದ್ದೀಯೇ. ಸರ್ವಜ್ಞನೂ, ಸಕಲ ಗುಣಶಾಲಿಯೂ ಆದ ಭಗವಂತ ನೀನಲ್ಲದೆ ಬೇರೆ ಇಲ್ಲ. ಎಲ್ಲ ಪ್ರಪಂಚದ ಪ್ರಭುವಾಗಿರುವ ದೇವರೇ ನಿನಗೆ ವಂದನೆ.
ಓ ಪ್ರಭು, ನನ್ನ ಭಗವಂತನೇ, ನೀನು ಪ್ರಶಂಸಾರ್ಹ ನಿನ್ನ ಕೋಮಲ ಕರುಣೆಯತ್ತ ನನ್ನ ದೃಷ್ಟಿ ನೆಟ್ಟಿರುವುದನ್ನು ನೀನು ಗಮಿನಿಸಿರುವೆ. ನಿನ್ನ ದಿವ್ಯ ದಿಗಂತದತ್ತ ನನ್ನ ಕಣ್ಣುಗಳು ಬಾಗಿರುವುದನ್ನೂ ತಿಳಿದಿರುವೆ. ಅಷ್ಟೇ ಅಲ್ಲ, ನಿನ್ನ ಕೊಡುಗೈ ಸ್ವರ್ಗದತ್ತ ನನ್ನ ಕೈಗಳು ಹೇಗೆ ಚಾಚಿವೆ ಎಂಬುದನ್ನೂ ಬಲ್ಲೆ. ನೀನೇ ನನಗೆ ಸಾಕ್ಷಿ ನನ್ನ ಶರೀರದ ಪ್ರತಿಯೊಂದೂ ಅವಯವವೂ ನಿನ್ನಲ್ಲಿ ಗೋಳಿಡುತ್ತಾ ಹೀಗೆ ಹೇಳುವುದು: “ವಿಶ್ವದ ಪ್ರೀತಿ ಪಾತ್ರನಾದ ಹಾಗೂ ಸ್ವರ್ಗ ಮತ್ತು ಭೂಮಿಯಲ್ಲಿರುವ ಎಲ್ಲ ವಸ್ತುಗಳ ಮೇಲೂ ಪ್ರಭುವಾಗಿರುವೆ ಮತ್ತು ಭಕ್ತರಾಗಿರುವವರ ಅಂತರಂಗದ ಆಶೋತ್ತರದ ಪ್ರತಿಬಿಂಬವೂ ನೀನಾಗಿರುವೆ. ಸ್ವರ್ಗ ಮತ್ತು ಭೂಮಿಯಲ್ಲಿ ವಾಸಿಸುವ ಎಲ್ಲರನ್ನೂ ನಿನ್ನ ಸಾಗರ ಸದೃಶ್ಯವಾದ ಕರುಣಾಕಟಾಕ್ಷಕ್ಕೆ ಆಹ್ವಾನಿಸಿ ಈ ಕರುಣೆಯ ಬೀಡಿಗೆ ದೂರವಾಗಿರಿಸಲ್ಪಟ್ಟು ದಡವನ್ನು ಮುಟ್ಟಲು ಆಸ್ವದವಿಲ್ಲದಂಟೆ ಮಾಡಲಾಗಿರುವ ನಿನ್ನ ಸೇವಕರಿಗೆ ಸಹಾಯವೆಸಗು. ಓ ಪರಮಾತ್ಮನೇ, ಅವರನ್ನು ನಿನ್ನ ಸಂಪರ್ಕವಲ್ಲದೆ ಬೇರಾವುದರಿಂದಲೂ ಬೇರ್ಪಡಿಸು. ನಿನ್ನ ಗುಣಗಾನ ಹಾಗೂ ಪ್ರಶಂಸೆ ಮಾಡುವಂತೆ ನೋಡು. ಅಲ್ಲದೆ, ಓ ದೇವರೇ, ಅವರಿಗೆ ನಿನ್ನ ಕರುಣೆಯೆಂಬ ದ್ರಾಕ್ಷಾರಸವನ್ನು ಒದಗಿಸಿ ಆ ಮೂಲಕ ನಿನ್ನನ್ನಲ್ಲದೆ ಮಿಕ್ಕವರನ್ನು ಮರೆಯುವಂತೆಯೂ, ನಿನ್ನ ಧ್ಯೇಯೋದ್ದೇಶಗಳನ್ನು ಕುರಿತು ಸೇವೆ ಸಲ್ಲಿಸುವಂತೆಯೂ ಮತ್ತು ನಿನ್ನ ಬಗ್ಗೆ ಅವರು ಪ್ರೀತಿ, ನಿಷ್ಠೆಯಿಂದಿರುವಂತೆಯೂ ಅನುಗ್ರಹಿಸು. ನಿಜಕ್ಕೂ ಅವರ ಜೀವಿತಗಳ ಮೇಲೆ ಅಧಿಪತಿ ನೀನಾಗಿದ್ದೀಯೇ. ಅವರು ನಿನ್ನಿಂದ ತ್ಯಜಿಸಲ್ಪಟ್ಟರೆ ಅವರನ್ನು ನೋಡುವವರಾರು? ನಿನ್ನಿಂದ ದೂರಕ್ಕೆ ಸರಿಸಲ್ಪಟ್ಟರೆ ನಿನ್ನ ಸಾಮೀಪ್ಯಕ್ಕೆ ಬರಲು ಅವರಿಗೆ ಸಹಾಯ ನೀಡುವವರಾರು? ನಿನ್ನ ಶಕ್ತಿಯ ಬಗ್ಗೆ ನನಗೆ ಅಪಾರ ನಂಬಿಕೆಯಿದೆ. ನಿನ್ನ ಬಳಿಯಲ್ಲದೆ ಬೇರೆಲ್ಲಿಯೂ ಸುಳಿಉಯುವ ನಿರಾಶ್ರಿತನನ್ನು ನಾಕಾಣೆ. ನಿನ್ನ ರಕ್ಷಣೆಯಲ್ಲದೆ ಬೇರೆ ರಕ್ಷಣೆಯನ್ನು ಅರಸಲು ಶಕ್ಯವಿಲ್ಲ. ನಿನ್ನ ಸುರಕ್ಷತೆಯಲ್ಲದೆ ಬೇರೆ ಯಾವ ಸುರಕ್ಷತೆಯೂ ಇಲ್ಲ. ನಿನ್ನನ್ನಲದೆ ಬೇರೆ ಯಾರನ್ನೇ ಆಗಲಿ ತನ್ನ ಪ್ರಭುವೆಂದು ಸ್ವೀಕರಿಸಿದವನಿಗೆ ಸಂಕಟ ಪ್ರಾಪ್ತವಾಗಲಿ, ಭೂಮಿಯ ನಿವಾಸಿಗಳ ಮೇಲಿನ ಎಲ್ಲ ಮಮತೆಯನ್ನು ನೀಗಿದವರು ಪಾವನರು. ನಿನ್ನ ದಯಾಪರತೆಯ ಅಂಚನ್ನು ಅಂಟಿಕೊಂಡಿರುವವರು ಧನ್ಯರು. ಬಹಾರ ಈ ಜನರೇ ಸ್ವರ್ಗದಲ್ಲಾಗಲೀ, ಭೂಮಿಯಲ್ಲಾಗಲೀ ವಾಸಿಸುವ ಜನರ ಮೇಲಿನವರು. ನೀನಲ್ಲದೆ ಇನ್ನಾವ ದೇವರಿಲ್ಲ ನೀನು ಅನಂತ, ಸರ್ವ ಸಂಪನ್ನ” ವಿಶ್ವಗಳೆಲ್ಲದರ ಪ್ರಭುವಾಗಿರುವ ನಿನಗೆ ವಂದನೆ.

*ರವರು ಚಿಕ್ಕ ಮಧ್ಯಮ ಮತ್ತು ದೀರ್ಘವೆಂಬ ಮೂರು ಅನಿವಾರ್ಯ ಪ್ರಾರ್ಥನೆಗಳನ್ನು ಅನುಗ್ರಹಿಸಿರುವರು. ಇವುಗಳಲ್ಲಿ ಯಾವುದಾದರೊಂದನ್ನೂ ಅಯ್ದುಕೊಂಡರೆ ನಾವು ನಮ್ಮ ಕರ್ತವ್ಯವನ್ನು ಪಾಲಿಸಿದಂತಾಗುವುದು) ಚಿಕ್ಕ ಅನಿವಾರ್ಯ ಪ್ರಾರ್ಥನೆ

*(ಪ್ರತಿ ದಿನ ಮಧ್ಯಾನ್ಹ 12 ಗಂಟೆಯಿಂದ ಸೂರ್ಯಾಸ್ತದೊಳಗೆ ಒಂದು ಬಾರಿ ಕಡ್ಡಾಯವಾಗಿ ಪಠಿಸಲೇಬೇಕಾದ ಚಿಕ್ಕ ಅನಿವಾರ್ಯ ಪ್ರಾರ್ಥನೆ)

ಓ ನನ್ನ ಪರಮಾತ್ಮನೇ, ನಿನ್ನನ್ನು ಅರಿಯಲು ಹಾಗೂ ಆರಾಧಿಸಲು ನನ್ನನ್ನು ನೀನು ಸೃಷ್ಟಿಸಿದೆ. ಅದಕ್ಕೆ ನಾನೇ ಸಾಕ್ಷಿ. ನಾನು ಬಲಹೀನ, ನೀನು ಬಲಶಾಲಿ ನಾನು ಬಡವ, ನೀನು ಸಿರಿವಂತ, ಇದನ್ನು ನಾನು ಸಾರಿ ಹೇಳುತ್ತೇನೆ. ನೀನಲ್ಲದೆ ಬೇರೆ ದೇವರಿಲ್ಲ, ಆಪತ್ತಿನಲ್ಲಿ ನೀನೇ ರಕ್ಷಕ ಸ್ವಯಂಪರಿಪೂರ್ಣ.